ರೈತರ ಸಾಲ ಮನ್ನಾ ಮಾಡಿದ್ದು ಕಾಂಗ್ರೆಸ್ ಸರ್ಕಾರವೇ: ಸಚಿವ ಸತೀಶ್ ಜಾರಕಿಹೊಳಿ

Kuntinath
WhatsApp Group Join Now
Telegram Group Join Now

ರಾಜ್ಯದಲ್ಲಿ ಎರಡು, ಕೇಂದ್ರದಲ್ಲಿ ಒಂದು ಬಾರಿ ರೈತರ ಸಾಲ ಮನ್ನಾ ಮಾಡಿದ್ದು ಕಾಂಗ್ರೆಸ್ ಸರ್ಕಾರವೇ: ಸಚಿವ ಸತೀಶ್ ಜಾರಕಿಹೊಳಿ

ಕಾಂಗ್ರೆಸ್ ರೈತರ, ಬಡವರ, ಹಿಂದುಳಿದವರ, ದೀನ ದಲಿತರ ಪಕ್ಷ- ಕಾಂಗ್ರೆಸ್ ಸರ್ಕಾರದ ಎಲ್ಲಾ ಯೋಜನೆಗಳ ಬಗ್ಗೆ ಮತದಾರರಿಗೆ ತಿಳಿಸಿ

ಹುಕ್ಕೇರಿ: ಕಾಂಗ್ರೆಸ್ ರೈತರ, ಬಡವರ, ಹಿಂದುಳಿದವರ, ದೀನ ದಲಿತರ ಪಕ್ಷ. ಅದಕ್ಕಾಗಿಯೇ ರಾಜ್ಯದಲ್ಲಿ ಎರಡು ಬಾರಿ, ಕೇಂದ್ರದಲ್ಲಿ ಒಂದು ಬಾರಿ ರೈತರ ಸಾಲವನ್ನು ಮನ್ನಾ ಮಾಡಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ಹುಕ್ಕೇರಿ ತಾಲೂಕಿನ ಗುಡಸ, ಹುಲ್ಲೋಳ್ಳಿ, ಕೊಟಬಾಗಿ, ಸುಲ್ತಾನಪೂರ್, ಯರನಾಳ ಹಾಗೂ ಬಡಕುಂದ್ರಿ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಪರ ಮತಯಾಚಿಸಿ, ಅವರು ಮಾತನಾಡಿದರು.

ಸಿಎಂ ಸಿದ್ದರಾಮಯ್ಯನವರ ಹಿಂದಿನ ಅವಧಿಯಲ್ಲಿ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಿದ್ದೇವೆ. ಡಾ. ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ 70 ಸಾವಿರ ಕೋಟಿ ರೂಪಾಯಿ ರೈತರ ಸಾಲವನ್ನು ಮನ್ನಾ ಮಾಡಿದ್ದೇವೆ. ಆದ್ದರಿಂದ ಸದಾ ನಿಮ್ಮ ಪ್ರಗತಿಯನ್ನು ಬಯಸುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ತಿಳಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಕಾರ್ಯಕರ್ತರು ಮನೆಯಲ್ಲೇ ಕುಳಿತರೆ ಸಾಲದು, ಕಾಂಗ್ರೆಸ್ ಸರ್ಕಾರದ ಎಲ್ಲಾ ಯೋಜನೆಗಳ ಬಗ್ಗೆ ಮತದಾರರಿಗೆ ತಿಳಿಸಬೇಕೆಂದು ಕರೆ ನೀಡಿದರು.

ಬಿಜೆಪಿಯವರು ಹೇಳ್ತಾರೆ, ಮೋದಿ ಮುಖ ನೋಡಿ ಮತ ನೀಡಿ ಎಂದು, ಆದರೆ ಮೋದಿ ಮುಖ ನೋಡಿ ಬಿಜೆಪಿ ಅಭ್ಯರ್ಥಿ ಗೆ ಮತ ನೀಡಿದರೆ ಪ್ರಧಾನಿ ಮೋದಿ ಬಂದು ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲ್ಲ. ಅದಕ್ಕಾಗಿ ಸ್ಥಳೀಯವಾಗಿ ನಿಮ್ಮ ಎಲ್ಲಾ ಕಷ್ಟ, ದುಖಃಗಳಲ್ಲಿ ಭಾಗಿಯಾಗುವ ನಮ್ಮನ್ನು ಬೆಂಬಲಿಸಬೇಕು. ಇನ್ನು ಪ್ರಿಯಂಕಾ ಜಾರಕಿಹೊಳಿ ಗೆದ್ದೆ ಗೆಲ್ಲುತ್ತಾಳೆಂಬ ವಿಶ್ವಾಸ ನಮಗಿದೆ. ಆದರೆ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಈಗಾಗಲೇ ನಿಮ್ಮ ಭಾಗಕ್ಕೆ ನೀರು ಒದಗಿಸಿದ್ದೇವೆ. ಮುಂದೆಯೂ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ. ಆದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಹೆಚ್ಚಿನ ಮತಗಳನ್ನು ನೀಡುವ ಮೂಲಕ ನಮ್ಮ ಕೈಯನ್ನು ಬಲಪಡಿಸಬೇಕೆಂದು ತಿಳಿಸಿದರು.

ಜನಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದೇ ನಮ್ಮ ಮೊದಲ ಆದ್ಯತೆ. ಹುಕ್ಕೇರಿ ಕ್ಷೇತ್ರಕ್ಕೆ ನಮ್ಮ ಇಲಾಖೆಯಿಂದ ಈ ಬಾರಿ 5 ಶಾಲೆಗಳನ್ನು ನೀಡಿದ್ದೇನೆ. ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿದ್ದೇವೆ. ಇನ್ನು ನೀರಾವರಿ ಸೌಲಭ್ಯ ಕಲ್ಪಿಸಲು ಕಳೆದ ಎರಡು ತಿಳಂಗಳಿಂದ ಶ್ರಮಿಸುತ್ತಿದ್ದೇನೆ. ಚುನಾವಣೆಗೆ ನಿಲ್ಲಬೇಕೆಂಬುವುದು ಕನಸು, ಮನಸ್ಸಿನಲ್ಲಿಯೂ ಇರಲಿಲ್ಲ. ಆದರೆ ಹೈಕಮಾಂಡ್, ರಾಜ್ಯ ನಾಯಕರು, ಜಿಲ್ಲೆಯ ಎಲ್ಲಾ ನಾಯಕರ ಮನವಿ, ಒತ್ತಾಯದ ಮೇರೆಗೆ ಪ್ರಿಯಂಕಾ ಅವರನ್ನು ಚುನಾವಣಾ ಕಣಕ್ಕೆ ಇಳಿಸಿದ್ದು, ಪ್ರಿಯಂಕಾ ಅವರನ್ನು ಗೆಲ್ಲಿಸಲು ನಿವೆಲ್ಲ ಶ್ರಮಿಸಬೇಕೆಂದು ಹೇಳಿದರು.

ಇನ್ನು ಸುಲ್ತಾನಪೂರ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸುಲ್ತಾನಪೂರ್ ಗ್ರಾಮದ ಜನತೆ ನಮ್ಮುರಿನಲ್ಲಿ ಕೆಲವು ಅಭಿವೃದ್ಧಿ ಕೆಲಸಗಳಾಗಬೇಕೆಂದು ಮನವಿ ಮಾಡಿದರು. ಸ್ಥಳದಲ್ಲೇ ಮನವಿಗೆ ಸ್ಪಂದಿಸಿದ ಸಚಿವ ಸತೀಶ್‌ ಜಾರಕಿಹೊಳಿ, ಚುನಾವಣೆ ಮುಗಿದ ಬಳಿಕ ನಿಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತೇನೆಂದು ಭರವಸೆ ನೀಡಿದರು.

ಮಾಜಿ ಸಚಿವ ಶಶಿಕಾಂತ್ ನಾಯಕ ಮಾತನಾಡಿ, ಸಚಿವ ಸತೀಶ್ ಜಾರಕಿಹೊಳಿ ಅವರ ಕಾರ್ಯಕ್ಷಮತೆ ಬಗ್ಗೆ ನಿಮ್ಮೆಲ್ಲರಿಗೂ ಗೊತ್ತಿದೆ. ಯಾರೇ ಜನ ಸಾಮಾನ್ಯರು ಅವರ ಬಳಿ ಹೋದರೆ ಸಮಾಧಾನದಿಂದ ಸಮಸ್ಯೆಯನ್ನು ಆಲಿಸಿ, ಪರಿಹಾರ ಕಲ್ಪಿಸುತ್ತಾರೆ. ನಾನು ಸಾಕಷ್ಟು ಕೆಲಸಕ್ಕಾಗಿ ಅವರ ಬಳಿ ಹೋದಾಗ ಸ್ಪಂದಿಸಿದ್ದಾರೆ. ಕಾರಣ ಇಂತಹ ನಾಯಕರು ಸಿಕ್ಕಿದ್ದು, ನಮ್ಮ ಸೌಭಾಗ್ಯ. ಅಂತಹ ನಾಯಕರ ಮಗಳ ಪುತ್ರಿ ಪ್ರಿಯಂಕಾ ಜಾರಕಿಹೊಳಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸೋಣ ಎಂದರು.

ಹುಕ್ಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ರವದಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕಲಗೌಡ ಪಾಟೀಲ್, ಸುರೇಶ್ ಹುಂಚಾಳೆ, ದಯಾನಂದ ನಾಯಕ, ರವಿ ಬಡಿಗೇರ, ಅನಿಲ ನೇರ್ಲಿ, ತಮ್ಮಣ್ಣಾ ಬಡಿಗೇರ, ಶ್ರೀಧರ ಬಡಿಗೇರ, ಅಣ್ಣಪ್ಪಾ ಮಾದರ, ರಮೇಶ್ ವಡ್ಡರ, ಅರುಣ ನೇರ್ಲಿ, ಮಲ್ಲು ನೇರ್ಲಿ, ಶಿವು ಪಾಟೀಲ್, ಮಹಿಳಾ ಮುಖಂಡರಾದ ಪಂಕಜಾ ನೇರ್ಲಿ ಸೇರಿದಂತೆ ಗುಡಸ, ಹುಲ್ಲೋಳ್ಳಿ, ಕೊಟಬಾಗಿ, ಸುಲ್ತಾನಪೂರ್ ಹಾಗೂ ಬಡಕುಂದ್ರಿ ಗ್ರಾಮದ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಿರಿಯರು, ಮಹಿಳೆಯರು, ಯುವಕರು ಇದ್ದರು.

WhatsApp Group Join Now
Telegram Group Join Now
Share This Article